CRIME NEWS

ನ್ಯಾಯಾಂಗ ನಿಂದನೆ, ಬಂಧನ ಭೀತಿಯಿಂದ ತಪ್ಪೊಪ್ಪಿಗೆ ಬರೆದ ನ್ಯಾಯವಾದಿ

Share

 

ಉಡುಪಿ: ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ವೇಳೆ ಆರೋಪಿ ಪರ ವಕೀಲ ಮಹಮ್ಮದ್ ಇಕ್ಬಾಲ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶ ಹಾಗು ಸಿಜೆಎಮ್ ಅವರಿಗೆ ನಿಂದಿಸಿ, ಬಂಧನಕ್ಕೆ ನ್ಯಾಯಾಧೀಶರು ಸೂಚಿಸುತ್ತಿದ್ದಂತೆಯೇ ತಪ್ಪೊಪ್ಪಿಗೆ ಬರೆದು ಬಚಾವಾಗಿ ದ್ದಾರೆ.

ಇಕ್ಬಾಲ್

ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಮಾರಕಾಸ್ತ್ರದಿಂದ ಹೊಡೆದಾಡಿಕೊಂಡ ಪ್ರಕರಣದಲ್ಲಿ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದ ವೇಳೆ ಹಿರಿಯ ಸಹಾಯಕ ಸರಕಾರಿ ಅಭಿಯೋಜಕರಿಗೆ ವಾದಿಸಲು, ಆರೋಪಿಯ ಪರ ವಕೀಲರು ಅಡ್ಡಿ ಪಡಿಸುತ್ತಿದ್ದರು. ಸರಕಾರಿ ವಕೀಲರಿಗೆ ವಾದಿಸಲು ಅಡ್ಡಿಪಡಿಸಬೇಡಿ ಎಂದು ನ್ಯಾಯಾಧೀಶರು ಮನವರಿಕೆ ಮಾಡಿದರೂ, ಅವರು ತಮ್ಮ ವರ್ತನೆಯನ್ನು ನಿಲ್ಲಿಸಿಲ್ಲ.

ನ್ಯಾಯಾಧೀಶರು ತಮ್ಮ ಸ್ಟೆನೋ ಅವರಿಗೆ ಸೂಚಿಸಿ, ವಕೀಲ ಮಹಮ್ಮದ್ ಇಕ್ಬಾಲ್ ಅವರ ಮಾತುಗಳನ್ನು ದಾಖಲಿಸಿದ್ದಾರೆ. ಇಷ್ಟಾದರೂ ವಕೀಲ ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳದೇ, ಉದ್ದೇಶಪೂರ್ವಕವಾಗಿ ಅಸಂಸದೀಯ ಪದಗಳು ಮತ್ತು ಸಂವಿಧಾನಬಾಹಿರ ಪದಗಳನ್ನು ಬಳಸಿ, ಜೋರಾಗಿ ಕಿರುಚಾಡಿ ನ್ಯಾಯಧೀಶರಿಗೆ ನಿಂದಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ.

ಆಗ ನ್ಯಾಯಾಧೀಶರು ವಕೀಲರಿಗೆ, ತಮ್ಮ ಈ ಕೃತ್ಯವು ಐಪಿಸಿ ಕಲಂ 228 ಅಥವಾ ಬಿಎನ್‌ಎಸ್ ಕಲಂ 267 ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ತಿಳಿಸಿ, ಪೋಲಿಸರಿಗೆ ಬಂಧಿಸಲು ಸೂಚಿಸುತ್ತಾರೆ. ತಕ್ಷಣ ನಗರ ಠಾಣಾ ಪಿಎಸ್ಐ ಭರತೇಶ್ ಹಾಗು ಸಿಬ್ಬಂದಿ ನ್ಯಾಯಾಲಯಕ್ಕೆ ಆಗಮಿಸಿ, ವಕೀಲ ಮಹಮ್ಮದ್ ಇಕ್ಬಾಲ್ ಅವರನ್ನು ಸುತ್ತುವರಿಯುತ್ತಾರೆ. ಆಗ ವಕೀಲ ಮಹಮ್ಮದ್ ಇಕ್ಬಾಲ್ ತಪ್ಪೊಪ್ಪಿಗೆ ಬರೆದುಕೊಟ್ಟು, ಬಂಧನದ ಭೀತಿಯಿಂದ ಪಾರಾದರು.

ಈ ಘಟನೆಯ ಬಳಿಕ ತಮ್ಮ ನ್ಯಾಯಾಲಯದಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲದೇ ಇದ್ದಲ್ಲಿ ಪ್ರಕರಣವನ್ನು ಇತರೆ ನ್ಯಾಯಾಲಯಕ್ಕೆ ವರ್ಗಾಯಿಸಿಕೊಳ್ಳಲು ನ್ಯಾಯಧೀಶರು ವಕೀಲರಿಗೆ ತಿಳಿಸಿದರು. ಆಗ ವಕೀಲ, ತನಗೆ ಈ ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ಇನ್ನು ಮುಂದಕ್ಕೆ ನ್ಯಾಯಾಲಯಕ್ಕೆ ನಿಂದಿಸುವುದಿಲ್ಲ ಎಂದರು. ಅದರಂತೆ ವಕೀಲರ ಮಾತುಗಳನ್ನು ನ್ಯಾಯಾಲಯವು ದಾಖಲಿಸಿಕೊಂಡಿತು.

 

ಮಲ್ಪೆ ಠಾಣಾ ವ್ಯಾಪ್ತಿಯ ಅಡ್ಡಬೇಂಗ್ರೆಯಲ್ಲಿ 2024 ರ ಜ.12 ರ ತಡರಾತ್ರಿ 2 ಗಂಟೆಗೆ ಮಾರಕಾಸ್ತ್ರದಿಂದ ಹೊಡೆದಾಡಿಕೊಳ್ಳುತ್ತಿದ್ದ ಬಗ್ಗೆ ಮಲ್ಪೆ ಠಾಣೆಯಲ್ಲಿ ಜ.13 ರಂದು ಆರೋಪಿಗಳಾದ ಸಕ್ಲೇನ್, ರಾಕೀಬ್ ಹಾಗು ಸುಮಿತ್ ವಿರುದ್ದ ಪ್ರಕರಣ ದಾಖಲಾಗಿತ್ತು.

ಗರುಡಾ ಗ್ಯಾಂಗಿನ ಆರೋಪಿಗಳು

ಈ ಪ್ರಕರಣ ಆರೋಪಿಗಳಾದ ಸಕ್ಲೇನ್ ಹಾಗು ಅಬ್ದುಲ್ ರಾಕೀಬ್ ಅಸ್ಸಾದಿ ಗರುಡಾ ಗ್ಯಾಂಗಿನ ಸದಸ್ಯರಾಗಿದ್ದು, ವಿವಿಧ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಪೋಲಿಸ್ ದಾಖಲೆಗಳಿವೆ. ಗೂಂಡಾ ಕಾಯ್ದೆ ಹಾಗು ರೌಡಿಶೀಟರ್‌ಗಳಾಗಿದ್ದಾರೆ. ಸಕ್ಲೇನ್ (ಬಳ್ಳಾರಿ) ಹಾಗು ಅಬ್ದುಲ್ ರಾಕೀಬ್ ಅಸ್ಸಾದಿ (ಕಲಬುರಗಿ) ಜೈಲಿನಲ್ಲಿದ್ದರು.

ಕಲಬುರಗಿ ಜೈಲಿನಲ್ಲಿರುವ ಅಬ್ದುಲ್ ರಾಕೀಬ್‌ ಅಸ್ಸಾದಿ ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿದ್ದು, ಆತನ ವಿರುದ್ದ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಮಲ್ಪೆ ಪಿಎಸ್ಐ 2025 ರ ಜು‌‌.27 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಪುರಸ್ಕರಿಸಿದ ನ್ಯಾಯಾಲಯವು ವಾರೆಂಟ್ ಹೊರಡಿಸಿತ್ತು. ಇದನ್ನು ಆಕ್ಷೇಪಿಸಿ ಆರೋಪಿ ಪರ ವಕೀಲ ಮಹಮ್ಮದ್ ಇಕ್ಬಾಲ್ ಜು.28 ರಂದು ಅರ್ಜಿ ಸಲ್ಲಿಸಿದರು. ಈ ಅರ್ಜಿಯ ವಿಚಾರಣೆ ಆ.1 ರಂದು ಮಧ್ಯಾಹ್ನದ ಕಲಾಪದಲ್ಲಿ ನಡೆಯಿತು.

 

ಈ ಹಿಂದೆಯೂ ಇತರ ನ್ಯಾಯಾಲಯದಲ್ಲಿ ವಕೀಲ ಮಹಮ್ಮದ್ ಇಕ್ಬಾಲ್, ನ್ಯಾಯಾಲಯದ ಕಲಾಪದ ವೇಳೆ ಇದೇ ರೀತಿಯ ದುರ್ನಡತೆ ತೋರಿ ನ್ಯಾಯಾಧೀಶರಿಂದ ಬುದ್ದಿಮಾತನ್ನು ಹೇಳಿಸಿಕೊಂಡಿದ್ದರು.

To Top