ಜನಪ್ರತಿನಿಧಿಗಳು ಜನಸ್ನೇಹಿಯಾದಾಗ ಗ್ರಾಮದ ಅಭ್ಯುದಯ: ಸ್ಪೀಕರ್ ಯು.ಟಿ.ಖಾದರ್
ಮಂಗಳೂರು: ಪಂಚಾಯಿತಿಗಳು ಗ್ರಾಮದ ಹೃದಯವಾಗಿದ್ದು, ಗ್ರಾಮರಾಜ್ಯದ ಕನಸುಗಳು ಇಲ್ಲಿಂದಲೇ ಸಾಕಾರಗೊಳ್ಳುತ್ತಿವೆ. ಜನಪ್ರತಿನಿಧಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಗ್ರಾಮದ ಅಭ್ಯುದಯ ಸಾಧ್ಯ. ಗ್ರಾಮದ ಅಭಿವೃದ್ಧಿ ಮೂಲಕ ರಾಜ್ಯ, ದೇಶದ ಅಭಿವೃದ್ಧಿ ಕಾಣಲು ಸಾಧ್ಯ ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು. ಟಿ.ಖಾದರ್ ಹೇಳಿದರು.
ದ.ಕ ಜಿಲ್ಲಾ ಪಂಚಾಯಿತಿ ಮಂಗಳೂರು, ತಾಲೂಕು ಪಂಚಾಯಿತಿ, ನೀರುಮಾರ್ಗ ಗ್ರಾಮ ಪಂಚಾಯಿತಿ ಮತ್ತು ಸರಕಾರೇತರ ಸಂಸ್ಥೆಯಾದ ಹಸಿರು ದಳ ಮಂಗಳೂರು ಜಂಟಿಯಾಗಿ ನೀರುಮಾರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾನಾ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಜನಪ್ರತಿನಿಧಗಿಳು ಸಾರ್ವಜನಿಕ ಜೀವನದಲ್ಲಿ ಟೀಕೆ-ಹೊಗಳಿಕೆ ಸಮಾನವಾಗಿ ಸ್ವೀಕರಿಸಿದಾಗ ಯಶಸ್ಸು ಕಾಣಲು ಸಾಧ್ಯವಿಲ್ಲ. ನಾವು ಭವಿಷ್ಯದ ಮಕ್ಕಳಿಗೆ ಒಂದು ಸೌಹಾರ್ದಯುತ, ಸುಂದರ ವಾತಾವರಣ ನಿರ್ಮಿಸಿಕೊಡುವ ಜವಾಬ್ದಾರಿಯಿದೆ ಎಂದರು.
ಗ್ರಾಮಗಳ ಅಭಿವದ್ಧಿಗೆ ದೊಡ್ಡ ಮಟ್ಟದ ಯೋಜನೆ ರೂಪಿಸಿದಾಗ ತನ್ನಿಂತಾನೆ ಅಭಿವೃದ್ಧಿ, ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಿದ ಅವರು, ನೀರುಮಾರ್ಗದ ನೂತನ ವಾಣಿಜ್ಯ ಸಂಕೀರ್ಣಕ್ಕೆ ಸರಕಾರ ದಿಂದ 1ಕೋಟಿ ರೂ. ಅನುದಾನ ದೊರಕಿಸಿಕೊಡಲು ಪ್ರಯತ್ನ ಮಾಡುತ್ತೇನೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀರುಮಾರ್ಗ ಪಂಚಾಯಿತಿ ಅಧ್ಯಕ್ಷ ಶ್ರೀಧರ ಚಿಕ್ಕಬೆಟ್ಟು ವಹಿಸಿದ್ದರು. ಉಪಾಧ್ಯಕ್ಷೆ ಮೋಲಿ ಶಾಂತಿ ಸಲ್ಡಾನ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ಪಿಡಿಒ ಅಬೂಬಕ್ಕರ್, ದ.ಕ ಜಿಲ್ಲಾ ಕೆಡಿಪಿ ಸದಸ್ಯ ಮೆಲ್ವಿನ್ ಡಿಸೋಜ, ನೀರುಮಾರ್ಗ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಸೆಲಿನ್ ಸಿಲ್ವಿಯಾ ಡಿಮೆಲ್ಲೋ, ಹಸಿರು ದಳದ ಯೋಜನಾ ಅಧಿಕಾರಿ ಧ್ರುವ, ಸೂಪರ್ವೈಸರ್ ಶ್ರಾವ್ಯಾ, ನಿಕಟಪೂರ್ವ ಕಾರ್ಪೊರೇಟರ್ ಭಾಸ್ಕರ್ ಕುಡುಪು, ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಪಂಚಾಯತ್ ಕಾರ್ಯದರ್ಶಿ ಶಾಲಿನಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಉಮಾನಾಥ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ
ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಮಹೇಶ್ ಕುಮಾರ್ ಹೊಳ್ಳ,ಮಹಮ್ಮದ್ ಬಾಷ, ಅಬೂಬಕ್ಕರ್, ಪದ್ಮ ನಾಭ ಕೋಟ್ಯಾನ್ ಪೆಲತ್ತಡಿ, ವಿಜಯ್ ಕೋಟ್ಯಾನ್ ಪಡು, ಮೋಲಿ, ರೋಹಿಣಿ ಅವರನ್ನು ಸನ್ಮಾನಿಸಲಾ ಯಿತು. ಶಿಕ್ಷಣ, ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ವಿಶಿಷ್ಟಚೇತನರಿಗೆ ಚೆಕ್ ವಿತರಿಸಲಾಯಿತು. ಪತ್ರಕರ್ತ ವಿಜಯ್ ಕೋಟ್ಯಾನ್ ನಿರೂಪಿಸಿದರೆ, ಪಿಡಿಒ ಅಬೂಬಕ್ಕರ್ ವಂದಿಸಿದರು.
ನೀರುಮಾರ್ಗ ಗ್ರಾಮ ಪಂಚಾಯಿತಿಯ ಬೊಂಂಡತಿಲ ಗ್ರಾಮದ ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ತ್ಯಾಜ್ಯ ವಿಲೇವಾರಿ ಘಟಕ(ಸ್ವಚ್ಛ ಸಂಕೀರ್ಣ) ಉದ್ಘಾಟನೆ, 5 ಕೋಟಿ ರೂ ವೆಚ್ಚದ ಗ್ರಾಮ ಪಂಚಾಯತಿ ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ, ಬೊಂಡಂತಿಲ ಗ್ರಾಮದ ತಾರಿಗುಡ್ಡೆ ಯಲ್ಲಿ 12 ಲಕ್ಷ ರೂ ವೆಚ್ಚದ ಜಿಮ್ ಕಟ್ಟಡ ಶಿಲಾನ್ಯಾಸ, ಬೊಂಡಂತಿಲ ಗ್ರಾಮದ ಕೊಂಬೆಲ್ಲಚ್ಚಿಲ್ನಲ್ಲಿ 12 ಲಕ್ಷ ರೂ ವೆಚ್ಚದ ಎಸ್ಡಿ/ಎಸ್ಸಿ ಸಮುದಾಯ ಭವನಕ್ಕೆ ಉದ್ಘಾಟನೆ, 57ನಿವೇಶನಗಳ ನೀಲ ನಕಾಶೆ ಬಿಡುಗಡೆ ಮಾಡಲಾಯಿತು.