ಮಂಗಳೂರು: ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದಾಕೆ ಮದುವೆಗೆ ನಿರಾಕರಿಸಿದಾಗ ಭಗ್ನ ಪ್ರೇಮಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.
ಗಾಯಗೊಂಡ ಆಕೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಓಡುವಾಗ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಆಕೆ ಸತ್ತೇ ಹೋದಳು ಎಂದು ತಿಳಿದ ಯುವಕ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರಕರಣದ ವಿವರ:
ಪ್ರೀತಿಸಿದ ಯುವತಿಗೆ ಚಾಕು ಇರಿದು ಕೊಲೆಗೆ ಯತ್ನಿಸಿ ಬಳಿಕ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.
ಚೂರಿ ಇರಿತಕ್ಕೊಳಗಾದ ಯುವತಿಯನ್ನು ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ (26) ಎಂದು ಗುರುತಿಸಲಾಗಿದ್ದು. ಆತ್ಮಹತ್ಯೆ ಮಾಡಿಕೊಂಡ ಯುವಕನ್ನು ಕೋಡ್ಮನ್ ಗ್ರಾಮ ನಿವಾಸಿ ಸುಧೀರ್ (30) ಎಂದು ತಿಳಿದು ಬಂದಿದೆ.
ಪೊಲೀಸ್ ಮಾಹಿತಿ ಪ್ರಕಾರ ಫರಂಗಿಪೇಟೆ ನಿವಾಸಿ ಕುಮಾರಿ ದಿವ್ಯಾ ಯಾನೆ ದೀಕ್ಷಿತಾ ಹಾಗೂ ಕೋಡ್ಮನ್ ಗ್ರಾಮ ನಿವಾಸಿ ಸುಧೀರ್ ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿರುತ್ತದೆ. ಯುವತಿ ದಿವ್ಯಾ ಸುಧೀರ ಜೊತೆ ಮಾತುಕತೆ ನಿಲ್ಲಿಸಿದ್ದಳು. ಆದರೂ ಸಹ ಆರೋಪಿ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು, ಮಾಡುತ್ತಿದ್ದ ಎಂದು ಹೇಳಲಾಗಿದೆ.
