, ಮಂಗಳೂರು
: ಸಂಗೀತವು ಮನುಷ್ಯನ ಆತ್ಮವನ್ನು ಪರಮಾತ್ಮನೆಡೆಗೆ ಕೊಂಡೊಯ್ಯುವ ಸೇತುವೆ ಎಂದು ಮಂಗಳೂರು ಶರವು ಮಹಾಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರರಾದ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ನುಡಿದರು.
ಅವರು ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಯು ಸುರತ್ಕಲ್ ನ ವಿಶ್ವೇಶತೀರ್ಥ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಗ ಸುಧಾರಸ- 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಕಳೆದ ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದರ ಜೊತೆಗೆ, ಹಿರಿಯ ಕಲಾವಿದರನ್ನು ಕರೆಸಿ ಉಪನ್ಯಾಸ, ಕಾರ್ಯಾಗಾರವನ್ನು ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿ ಸಂಸ್ಕಾರ ಭಾರತಿ ಮಾರ್ಗದರ್ಶಕ ಚಂದ್ರಶೇಖರ ಕೆ ಶೆಟ್ಟಿ ಮಾತನಾಡುತ್ತಾ ಕೊರೋನಾ ಸಮಯದಲ್ಲೂ ಆನ್ಲೈನ್ ಮೂಲಕ ಕಾರ್ಯಕ್ರಮ ಆಯೋಜಿಸಿ ದೇಣಿಗೆಯನ್ನು ಸಂಗ್ರಹಿಸಿ ಅರ್ಹ ಕಲಾವಿದರಿಗೆ ಹಂಚುವ ಮೂಲಕ ಕಲಾವಿದರ ಮೆಚ್ಚುಗೆಗೆ ಪಾತ್ರರಾಗಿರುವರು ಎಂದರು. ಅಧ್ಯಕ್ಷತೆ ವಹಿಸಿದ್ದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಶುಭಹಾರೈಸಿದರು. ಅಕಾಡೆಮಿಯ ಕಾರ್ಯದರ್ಶಿ ಪಿ ನಿತ್ಯಾನಂದ ರಾವ್ ಪ್ರಸ್ತಾವಿಕ ಮಾತುಗಳೊಂದಿಗೆ ಗಣ್ಯರನ್ನು ಸ್ವಾಗತಿಸಿದರು. ಆಕಾಶವಾಣಿ ‘ಎ’ ಗ್ರೇಡ್ ಪಡೆದ ಅರ್ಚನಾ ಮತ್ತು ಸಮನ್ವಿ ಯವರನ್ನು ಅಕಾಡೆಮಿ ವತಿಯಿಂದ ಗೌರವಿಸಲಾಯಿತು.
ನಾದಸ್ವರವಿದ್ವಾಂಸ ನಾಗೇಶ್ ಎ ಬಪ್ಪನಾಡು, ಪ್ರೊ.ವಿ ಅರವಿಂದ ಹೆಬ್ಬಾರ್, ವಿದುಷಿ ಗೀತಾ ಸರಳಾಯ, ನಾಗರಿಕ ಸಲಹಾ ಸಮಿತಿಯ ಡಾ.ರಾಜ ಮೋಹನ್ ರಾವ್ ಉಪಸ್ಥಿತರಿದ್ದರು. ಭರತಾಂಜಲಿಯ ಗುರುಗಳಾದ ಶ್ರೀಧರ ಹೊಳ್ಳ ನಿರೂಪಿಸಿ, ಪ್ರೊ. ಕೃಷ್ಣಮೂರ್ತಿ ವಂದಿಸಿದರು.

