ಚಿ.ರಮೇಶ್ ಕಲ್ಲಡ್ಕ ಹೃದಯಘಾತದಿಂದ ನಿಧ
ಮಂಗಳೂರು: ಕಲಾ ಸಂಗಮದ ಶಿವ ದೂತ ಗುಳಿಗೆ ನಾಟಕದ ಬ್ರಾಹ್ಮಣ ( ವಿವಾದಿತ) ಭೀಮರಾವ್ ಪಾತ್ರಧಾರಿ ಚಿ. ರಮೇಶ್ ಕಲ್ಲಡ್ಕ ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
ಮೂರು ದಶಕದಿಂದ ರಂಗ ಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಕಲ್ಲಡ್ಕ, ಕಲಾಸಂಗಮ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದರು. ಛತ್ರಪತಿ ಶಿವಾಜಿ ನಾಟಕದಲ್ಲಿ ದಾದಾಜಿ ಕೊಂಡ ದೇವ ಪಾತ್ರವನ್ನು ಅಭಿನಯಿಸುತ್ತಿದ್ದರು.
ರಮೇಶ್ ಕಲ್ಲಡ್ಕ ನಿಧನಕ್ಕೆ ರಂಗಭೂಮಿಯ ಹಿರಿ ಕಿರಿ ಕಲಾವಿದರು ಕಂಬನಿ ಮಿಡಿದಿದ್ದಾರೆ.
ಕಲಾ ಪಯಣ: ರಮೇಶ್ ಕಲ್ಲಡ್ಕ ಅವರು, ಕಾಲೇಜು ದಿನಗಳಲ್ಲೇ ನಾಟಕದಲ್ಲಿ ಅಭಿನಯಿಸುತ್ತಿದ್ದರು. ರಂಗಕರ್ಮಿ ಶಾಂತಾರಾಮ ಕಲ್ಲಡ್ಕ ಅವರ ಮಿತ್ರಬಳಗ ಕಲಾತಂಡದ ಮೂಲಕ ತನ್ನ ರಂಗ ಪಯಣ ಆರಂಭಿಸಿದ್ದರು. ವಿಜಯಕುಮಾರ್ ಕೊಡಿಯಾಲಬೈಲ್ ಅವರ ಗರಡಿಯಲ್ಲಿ ಪಳಗಿದ ರಮೇಶ್ ಕಲ್ಲಡ್ಕ, ಕಲಾಸಂಗಮದ ಎಲ್ಲಾ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ “ಶಿವದೂತಗುಳಿಗೆ” ನಾಟಕದ ಭೀಮಾ ರಾವ್ ಬ್ರಾಹ್ಮಣನ ಪಾತ್ರ ಅವರಿಗೆ ಹೆಸರು ಮತ್ತು ಇಮೇಜ್ ತಂದು ಕೊಟ್ಟಿತ್ತು.
ಬ್ರಾಹ್ಮಣರ ತೇಜೋವಧೆ: ಪಾಡ್ದನ ಆಧರಿತ ನಾಟಕ ಶಿವದೂತ ಗುಳಿಗೆ ಎಂದು ಹೇಳಲಾಗುತ್ತಿದ್ದರೂ ಇದರಲ್ಲಿ ಕಾಲ್ಪನಿಕ ಕಥೆಯನ್ನು ಕೂಡ ಸೇರಿಸಲಾಗಿತ್ತು.
ಬ್ರಾಹ್ಮಣನ ಅವಮಾನ ಮಾಡುವ ಸನ್ನಿವೇಶ ಇದರಲ್ಲಿ ಸೇರಿದ್ದು, ಉದ್ದೇಶ ಪೂರಕವಾಗಿಯೇ ಬ್ರಾಹ್ಮಣರಿಗೆ ನಿಂದನೆಯ ಶಬ್ದಗಳನ್ನು ಒದೆಯುವ ದೃಶ್ಯಗಳನ್ನು ಸೇರ್ಪಡೆಗೊಳಿಸಲಾಗಿತ್ತು
ಎಂದು ಬ್ರಾಹ್ಮಣ ಸಂಘಟನೆಯ ಗ್ರೂಪ್ಗಳಲ್ಲಿ ವಿರೋಧ ವ್ಯಕ್ತವಾಗಿ ಬಳಿಕ ಅಲ್ಲೇ ತಣ್ಣಗಾಗಿತ್ತು.
ಇದೀಗ ವಿವಾದಿತ ಪಾತ್ರ ಮಾಡುತ್ತಿದ್ದ ಪಾತ್ರಧಾರಿ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಮತ್ತೆ ವಿಚಾರ ಕೊಂಚ ಮುನ್ನೆಲೆಗೆ ಬಂದಿದೆ.
