ಮುಂಬೈ : ಮುಂಬೈಯಲ್ಲಿ 1980ರಿಂದ ತನ್ನ ವೃತ್ತಿಜೀವನವನ್ನು ಬ್ಯಾಂಕ್ ಉದ್ಯೋಗದ ಮೂಲಕ ಆರಂಭಿಸಿ ಇದೀಗ ಮಹಾರಾಷ್ಟ್ರದ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯಪ್ರವರ್ತಿಸುತ್ತಿರುವ ನ್ಯಾಯವಾದಿ ಮೋರ್ಲ ರತ್ನಾಕರ ಶೆಟ್ಟಿ ಅವರನ್ನು ತುಳುವ ಮಹಾಸಭೆ ಬೃಹತ್ ಮುಂಬೈ ಮಹಾನಗರದ ಸಂಚಾಲಕರಾಗಿ ನೇಮಕ ಮಾಡಲಾಗಿದೆ. ದಶಕಗಳಿಗೂ ಹೆಚ್ಚುಕಾಲ ಮಹಾರಾಷ್ಟ್ರ ಉಚ್ಚ ನ್ಯಾಯಾಲಯದಲ್ಲಿ ಯಶಸ್ವಿಯಾಗಿ ವಕೀಲ ವೃತ್ತಿ ನಡೆಸುತ್ತಿದ್ದು, ಕಾನೂನು ಕ್ಷೇತ್ರದ ಜೊತೆ ಜೊತೆಗೆ ಸಮಾಜಮುಖಿ ಸೇವೆ,ಶೈಕ್ಷಣಿಕ ಹಾಗೂ ಸಂಘಟನಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಮುಂಬೈಯ ಪ್ರತಿಷ್ಠಿತ ಸಂಘಟನೆಯಾದ ಮುಂಬೈ ಬಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿ ಸಂಘದ ಏಳಿಗೆಗಾಗಿ ಅವಿರತವಾಗಿ ದುಡಿದಿದ್ದರು. ಇವರು ಸಾಮಾಜಿಕ ಕಲ್ಯಾಣ ಸಮಿತಿ ಹಾಗೂ ಕಾನೂನು ಮತ್ತು ಉದ್ಯೋಗ ಸಮಿತಿಯ ಅಧ್ಯಕ್ಷರು ಸಹ ಹೌದು.ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಸ್ (IBCCI) ಇದರ ಸ್ಥಾಪಕ ನಿರ್ದೇಶಕರು ಹಾಗೂ ಸುಮಾರು ಹತ್ತು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯಕ್ಕೆ ಬಂಟ್ಸ್ ನ್ಯಾಯಾಧೀಶರ ಸಂಘಟನೆ ಬಂಟ್ಸ್ ಲಾ ಫೋರಂ ಇದರ ಗೌರವ ಕೋಶಾಧಿಕಾರಿಯಾಗಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರದಿಂದ ನಿರಂತರವಾಗಿ 20 ವರ್ಷಗಳ ಕಾಲ ವಿಶೇಷ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದರು
ಅವರು ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಿದ್ದು, ಮುಂಬೈ ಬಂಟ ಸಂಘಟನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸುತ್ತಾ, ಯುವಜನರಲ್ಲಿ ಶಿಸ್ತು, ಒಗ್ಗಟ್ಟು, ನಾಯಕತ್ವ ಬೆಳೆಸುವಲ್ಲಿ ಸಜೀವರಾಗಿದ್ದಾರೆ. ಇವರು 2005ರಲ್ಲಿ ಬಂಟರ ಯಾನೆ ನಾಡಾವರ ಸಂಘದಿಂದ “ಸೇವಾರತ್ನ” ಪ್ರಶಸ್ತಿ, 2023ರಲ್ಲಿ ಆಯಕ್ತಾಚಾರ್ ಪ್ರಶಸ್ತಿ, ಬೆಂಗಳೂರಿನ ಆರ್ಯಭಟ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಮತ್ತು ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಬಾಜನರಾಗಿದ್ದಾರೆ. ಇದೀಗ ಅಂದೇರಿ ಜೆಬಿ ನಗರದ ಬಳಿಯ ಓಂ ನಗರದಲ್ಲಿ ವಾಸವಾಗಿದ್ದಾರೆ
1928ರಲ್ಲಿ ಎಸ್. ಯು. ಪಣಿಯಾಡಿ ನೇತೃತ್ವದಲ್ಲಿ ಸ್ಥಾಪಿತ ತುಳುವ ಮಹಾಸಭೆ ಶತಮಾನೋತ್ಸವ ಹೆಜ್ಜೆಗಳಲ್ಲಿ ಪುನಶ್ಚೇತನಗೊಳ್ಳುತ್ತಿದ್ದು, ತುಳು ಭಾಷೆ ಸಂಸ್ಕೃತಿ ಆಚಾರ ವಿಚಾರಗಳ ಪುನರ್ ವ್ಯಾಖ್ಯಾನಗೊಳ್ಳಲು ತುಳುನಾಡನ್ ಕಳರಿ ತರಬೇತಿ (ಸಮರಕಲೆ, ಮರ್ಮ ಚಿಕಿತ್ಸೆ), ನಶಿಸಿರುವ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಭಾಷಾ–ಜಾತಿ–ಮತ ಸೌಹಾರ್ದತೆ ಪರಿಪೋಷಣೆ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.ಈ ನಿಟ್ಟಿನಲ್ಲಿ ಪ್ರತಿ ತಾಲೂಕು, ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ಗೋಪಿಕರಿಸಲಾಗುತ್ತಿದೆ.
ದೇಶದ ಇತರೆಡೆಗಳಲ್ಲಿಯೂ ತುಳುವ ಮಹಾಸಭೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಡ್ವೊಕೇಟ್ ರತ್ನಾಕರ ಶೆಟ್ಟಿ ಅವರನ್ನು ಮುಂಬೈ ಮಹಾನಗರದ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಅವರ ನೇತೃತ್ವದಲ್ಲಿ ಮುಂಬೈ ಮಹಾನಗರದಲ್ಲಿ ತುಳು ಭಾಷಾ ಬೋಧನೆ, ಸಂಸ್ಕೃತಿ ಸಂರಕ್ಷಣೆ, ಹಾಗೂ ಸಮುದಾಯದ ಆರ್ಥಿಕ ಮತ್ತು ಸಾಂಸ್ಕೃತಿಕ ಬಲವರ್ಧನೆಗೆ ಶಕ್ತಿಯುತ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ಮಹಾಸಭೆಯ ಕೇಂದ್ರ ಸಮಿತಿ ಅಭಿಪ್ರಾಯಪಟ್ಟಿದೆ. ಅವರ ನೇಮಕಾತಿಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ತುಳುವ ನಾಯಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
