♠ಪುತ್ತೂರು: ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಬಸಿರು ಮಾಡಿದ ಬಿಜೆಪಿ ಮುಖಂಡ ನ ಮಗ ಕೃಷ್ಣರಾವ್ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕೊನೆಗೂ ಮಧ್ಯಪ್ರವೇಶ ಮಾಡಿದೆ.
ಎಸ್ ಡಿ ಪಿ ಐ ಸಂಘಟನೆ ಪುತ್ತೂರಿನಲ್ಲಿ ಸಂತ್ರಸ್ತ ತಾಯಿಯ ಜೊತೆ ಸೇರಿಕೊಂಡು ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಬಿಜೆಪಿ ಪಕ್ಷಕ್ಕೆ ಇನ್ನಷ್ಟು ಹಾನಿಯಾಗುವುದನ್ನ ತಪ್ಪಿಸಲು ಕ್ರಮ ವಹಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಈ ಕುರಿತು ಮೌನ ಮುರಿದಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಬಿಜೆಪಿ ಮುಖಂಡನ ಮಗನಿಂದ ಅಪ್ರಾಪ್ತೆ ಸಂತ್ರಸ್ತೆಗೆ ಆದ ಅನ್ಯಾಯಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು
ನಾವೇನು ಸುಮ್ಮನೆ ಕುಳಿತಿಲ್ಲ. ಪುತ್ತೂರು ಶಾಸಕರು ಮುತುವರ್ಜಿ ವಹಿಸಿ ಮಾತುಕತೆ ನಡೆಸಿದ್ದಾರೆ. ಪ್ರಕರಣವನ್ನು ರಾಜಕೀಯ ಮಾಡದೇ, ಮದುವೆ ಮಾಡಿಕೊಡುವ ವಿಚಾರ ತಿಳಿಸಿದ ಬಳಿಕ ನಾವು ಮಧ್ಯಪ್ರವೇಶಿಸುವ ಅಗತ್ಯ ಇರಲಿಲ್ಲ. ಇದೀಗ ಪ್ರಕರಣ ಸುಖಾಂತ್ಯ ಕಂಡಿಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿದ್ದು, ಹೇಳಿಕೆ ನೀಡುತ್ತಿದ್ದೇವೆ
– ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ
ಮಾತು ತಪ್ಪಿದ ಜಗನ್ನಿವಾಸ್ ರಾವ್
ವಿವಾಹ ಮಾಡಿಕೊಡುವುದಾಗಿ ಜಗನ್ನಿವಾಸ್ ರಾವ್ ಹೇಳಿದ್ದರು. ಪಕ್ಷದ ಮುಖಂಡರು ಮಾತುಕತೆ ನಡೆಸಿದಾಗ, ಮದುವೆ ಮಾಡುವುದಾಗಿ ತಿಳಿಸಿದ್ದರು. ಹಾಗಾಗಿ ಈಗ ಮದುವೆ ಮಾಡಿಕೊಡುವ ಜವಾಬ್ದಾರಿ ಅವರದ್ದು. ಹಾಗೆ ಮಾಡಲಿಲ್ಲ ಎಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದರು.
ಸಂತ್ರಸ್ತೆಯ ಪರವಾಗಿ ನಾವಿದ್ದೇವೆ. ಪಕ್ಷದ ಮುಖಂಡರು ಮಾತುಕತೆ ನಡೆಸಿದ್ದಾರೆ. ಇದು ಅಂತಿಮ ಹಂತಕ್ಕೆ ಬರಲಿ. ಅದಕ್ಕೆ ಶಾಸಕರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ನಗರ ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ್ ಉಜಿರೆಮಾರು, ಮಾಜಿ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.
