ಮಕ್ಕಳಲ್ಲಿ ಕಲಾಭಿರುಚಿ ಬೆಳೆಸುವುದು ಅಗತ್ಯ : ಎಡನೀರು ಶ್ರೀಗಳು
ಬಾಲ್ಯದಲ್ಲಿ ಮಕ್ಕಳಲ್ಲಿ ಕಲಾಭಿವೃದ್ಧಿ ಬೆಳೆಸಬೇಕು ಅದು ಹೆಮ್ಮರವಾಗಿ ಬೆಳೆದು ಬಾಳಿಗೆ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ದಾರಿದೀಪವಾಗಬಲ್ಲದು ಎಂದು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಯತಿವರೇಣ್ಯರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ನುಡಿದರು.
ಕೊಟ್ಟಾರದ ಭರತಾಂಜಲಿ (ರಿ) ಕಿಂಕಿಣಿ ತ್ರಿಂಶತ್ ಸಂಭ್ರಮದಲ್ಲಿ ಆಯೋಜಿಸಿದ ನೃತ್ಯಾಮೃತಂ 2025 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಋಷಿಮುನಿಗಳು ಧಾರ್ಮಿಕ ಮಹತ್ವಗಳ ಜೊತೆಗೆ ಮನುಷ್ಯನ ಮಾನಸಿಕ ಅಭಿವೃದ್ಧಿಗೆ ಕೊಟ್ಟಂತಹ ದೊಡ್ಡ ಕೊಡುಗೆ ಈ ನೃತ್ಯ ಕಲೆ. ಭರತಾಂಜಲಿ ಸಂಸ್ಥೆಯು 30 ವರ್ಷಗಳಲ್ಲಿ ಸಮಾಜಮುಖಿ ಚಿಂತನೆಗಳೊಂದಿಗೆ ಕಲಾ ಸೇವೆ ಮಾಡುತ್ತಿರುವುದು ಅಭಿನಂದನೀಯ -ಎಡನೀರು ಸಚ್ಚಿದಾನಂದ ಭಾರತೀ ಸ್ವಾಮೀಜಿ
ನಟರಾಜನಿಗೆ ದೀಪ ಬೆಳಗಿಸಿ ಉದ್ಘಾಟಿಸಿದ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್, ಶಾಸ್ತ್ರೀಯ ಚೌಕಟ್ಟನ್ನು ಸರಳಗೊಳಿಸದೆ ಅದರೊಳಗೆ ಹೊಸತನವನ್ನು ಅಳವಡಿಸಿ ಕೊಂಡಾಗ ಪರಂಪರೆ ಉಳಿಯಲು ಸಾಧ್ಯ.
ಭರತಾಂಜಲಿಯ ಶ್ರೀಧರ ಹೊಳ್ಳ ಮತ್ತು ಪ್ರತಿಮಾ ಶ್ರೀಧರ್ ರವರ ಸಾಧನೆ ಮೆಚ್ಚುವಂಥದ್ದು ಎಂದರು.
ಭರತಾಂಜಲಿ ಮಾದರಿ
ನೃತ್ಯ ಕಲಿಯುವ ಕಲೆಯಾಗಿ ಉಳಿಯದೆ ಭಾರತೀಯ ಪರಂಪರೆಯ ಒಂದು ಭಾಗ. ಇದನ್ನು ಪೋಷಕರು ಮನಗಂಡು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಕಳೆದ 30 ವರ್ಷಗಳಲ್ಲಿ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ತೊಡಿಸಿಕೊಂಡಿರುವ ಕಲಾ ಸಂಸ್ಥೆ ಇದೊಂದು ಮಾದರಿ ಎಂದು ಶಿವಂ ಕನ್ಸ್ಟ್ರಕ್ಷನ್ ಇದರ ಮಾಲಕ ವಿಶ್ವೇಶ್ವರ ಬದೆವಿದೆ ನುಡಿದರು.
ಶ್ರೀಧರ ಹೊಳ್ಳ ಸ್ವಾಗತಿಸಿ, ನೃತ್ಯ ಗುರು ವಿದುಷಿ ಪ್ರತಿಮಾ ಶ್ರೀಧರ್ ವಂದಿಸಿದರು. ವಿದುಷಿ ಪ್ರಕ್ಷಿಲಾ ಜೈನ್ ನಿರೂಪಿಸಿದರು ಮಾನಸ ಕುಲಾಲ್ ಆದಿತಿ ಪೂಜಾರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ವಿದುಷಿ ರಾಜಶ್ರೀ ಉಳ್ಳಾಲ್ ,ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ವಿದುಷಿ ಶಾರದಾ ಮಣಿ ಶೇಖರ್ ಇವರನ್ನು ಭರತಾಂಜಲಿಯ ಪರವಾಗಿ ಶ್ರೀಗಳು ಫಲಮಂತ್ರಾಕ್ಷತೆ ನೀಡಿ ಗೌರವಿಸಿದರು.
ಕೊನೆಯಲ್ಲಿ ಭರತಾಂಜಲಿಯ ಗಣೇಶಪುರ ಸಿಂಧೂರ ಘಟಕದ ಮಕ್ಕಳಿಂದ ನೃತ್ಯ ಸಂಭ್ರಮ ಸಂಪನ್ನಗೊಂಡಿತು..
